ಯಕ್ಷಗುರುವಿಗೆ ಶತಮಾನದ ನಮನ, ಸಾಧಕರಿಗೆ ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಮಾರ್ಚ್ 31 , 2014
|
ಮಾರ್ಚ್ 30, 2014
|
ಯಕ್ಷಗುರುವಿಗೆ ಶತಮಾನದ ನಮನ, ಸಾಧಕರಿಗೆ ಸಮ್ಮಾನ
ಇಪ್ಪತ್ತನೆಯ ಶತಮಾನದ ಮೊದಲ ಪಾದ ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿನ ಒಂದು ಪರ್ವಕಾಲ. ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯದ ಶಂಖನಾದ ಉದಿಸಿ ರಾಷ್ಟ್ರೀಯ ಪುನರುತ್ಥಾನ ಸಾರ ಲ್ಪಟ್ಟ ಈ ಕಾಲಘಟ್ಟದಲ್ಲಿಯೇ ಹೆಚ್ಚು ಕಡಿಮೆ ಎಲ್ಲ ಭಾರತೀಯ ಸಾಂಪ್ರದಾಯಿಕ ಪ್ರದರ್ಶನ ಕಲೆಗಳೂ ತಮ್ಮ ಮೌಡ್ಯಗಳನ್ನು ಜಾಡಿಸುತ್ತ ಪುನರುತ್ಥಾನವನ್ನು ಪಡೆಯಲು ಆರಂಭಿಸಿದುದು. ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಮುಂಚೂಣಿಯಲ್ಲಿದ್ದ ವ್ಯಕ್ತಿಗಳನ್ನು ಚರಿತ್ರೆ ಅವರವರ ಕ್ಷೇತ್ರದ ಶಕ ಪುರುಷರು ಎಂದು ಗುರುತಿಸಿದೆ. ಯಕ್ಷಗಾನದ ಚರಿತ್ರೆಯನ್ನು ನೋಡಿ ದಾಗಲೂ ಇದು ನಿಜವೆನಿಸುತ್ತದೆ. ಕೂಡ್ಲು ಸುಬ್ರಾಯ ಶಾನುಭಾಗರು ತೆಂಕುತಿಟ್ಟಿನ ಯಕ್ಷಗಾನಕ್ಕೆ ಒಂದು ಶಾಸ್ತ್ರೀಯ ಅನುಸಂಧಾನ ವನ್ನು ಆರಂಭಿಸಿದರು. ಈ ಕಾಲಘಟ್ಟದಲ್ಲಿಯೇ ಇದರ ಮುಂದುವರಿಕೆಯಾಗಿ ಕಾಸರ ಗೋಡು- ಸುಳ್ಯ ಭಾಗದಲ್ಲಿ ಶಾಸ್ತ್ರದ ಲಕ್ಷ್ಯ-ಲಕ್ಷಣಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಿದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು, ಯಕ್ಷಗಾನದ ಬೌದ್ಧಿಕ ಆಯಾಮವನ್ನು ವಿಸ್ತರಿಸಿದ ಶೇಣಿ ಗೋಪಾಲಕೃಷ್ಣ ಭಟ್ಟರು ಹೆಚ್ಚು ಕಡಿಮೆ ಈ ಕಾಲಘಟ್ಟದಲ್ಲಿಯೇ ಹುಟ್ಟಿದರು ಎಂಬುದು ಗಮನಾರ್ಹ.
ಕೀರಿಕ್ಕಾಡು ವಿಷ್ಣು ಭಟ್ಟರ (1913-1986) ಕೊಡುಗೆಗಳನ್ನು ನಾವು ಈ ಹಿನ್ನೆಲೆಯಲ್ಲಿಯೂ ಗಮನಿಸಬೇಕು. ಅವರು ಆರಂಭಿ ಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘಕ್ಕೆ ಈಗ 69ರ ಹರೆಯ. ಗುರುಕುಲ ಮಾದರಿಯಲ್ಲಿ ಯಾವುದೇ ಪ್ರತಿಫಲಾಕಾಂಕ್ಷೆಯಿಲ್ಲದೆ ನೂರಾರು ಶಿಷ್ಯರನ್ನು ತಯಾರು ಮಾಡಿದ ಈ ಶಾಲೆ ಯಕ್ಷಗಾನದ ಲಕ್ಷ್ಯ-ಲಕ್ಷಣಗಳನ್ನು ಕೇಂದ್ರೀಕರಿಸಿ ಮಹತ್ವದ ಕೊಡುಗೆಗಳನ್ನು ಕೊಟ್ಟಿದೆಯೆಂಬುದು ಕೀರಿಕ್ಕಾಡು ಅವರ ಹಿರಿಮೆ. ಯಕ್ಷಗಾನದ ಉಪಾಸಕನಾಗಿ ಅಧ್ಯಾಪಕನಾಗಿ, ಮುಂಚೂಣಿಯ ಅರ್ಥಧಾರಿ ಯಾಗಿ, ಅನೇಕ ಮೌಲಿಕ ಯಕ್ಷ ಗಾನ ಪ್ರಸಂಗಗಳನ್ನು ರಚಿಸುತ್ತ ಅವರು ಯಕ್ಷಗಾನ ಕುಲಪತಿಗಳಾಗಿ ಬೆಳೆದರು. ಇದಲ್ಲದೆ ನಾಟಕ, ಪ್ರಬಂಧ, ಕಾದಂಬರಿ ಮೊದಲಾದ ವಿಭಿನ್ನ ಸಾಹಿತ್ಯ ಪ್ರಕಾರಗಳಲ್ಲಿಯೂ ಕೈಯಾಡಿಸಿದರು. ವಿಷ್ಣು ಶರಣನ ದರ್ಪಣದಂತಹ ಬೋಧ ಕಾವ್ಯವನ್ನು ರಚಿಸಲೂ ಅವರಿಗೆ ಸಾಧ್ಯವಾಯಿತು.
ಅವರ ಶತಮಾನೋತ್ಸವದ ವರ್ಷಪೂರ್ತಿ ಕಾರ್ಯಕ್ರಮಗಳು ಕಳೆದ ಡಿ.28ರಂದು ದೇಲಂಪಾಡಿ ಯಲ್ಲಿ ಆರಂಭವಾಗಿದ್ದು, ದ್ವಿತೀಯ ಕಾರ್ಯಕ್ರಮ ಮುಂಬಯಿಯಲ್ಲಿ ಜರಗಿತು. ತೃತೀಯ ಕಾರ್ಯಕ್ರಮ ಇಂದು (ಮಾರ್ಚ್ 28, 2014) ಎಡನೀರು ಮಠದ ಸಭಾಭವನದಲ್ಲಿ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ನಡೆಯಲಿದೆ. ವಿಚಾರಗೋಷ್ಠಿ ಮೊದಲಾದ ಕಾರ್ಯಕ್ರಮಗಳೊಡನೆ ಕೀರಿಕ್ಕಾಡು ಅವರ ಕಿರಿಯ ಒಡ ನಾಡಿಗಳಾಗಿದ್ದು ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಹಿರಿಯ ಸಾಧಕರಾದ ವಿದ್ವಾನ್ ಬಾಬು ರೈ, ಎ. ನರಸಿಂಹ ಭಟ್ ಮತ್ತು ಅಡ್ಕ ಗೋಪಾಲಕೃಷ್ಣ ಭಟ್ ಅವರನ್ನು ಗೌರವಿಸಲಾಗುವುದು.
ವಿದ್ವಾನ್ ಬಾಬು ರೈ
ಕಾಸರಗೋಡಿನ ಹಿರಿಯ ಮೃದಂಗ ವಾದಕ ಬಾಬು ರೈ ಅವರು ಸಂಗೀತ- ಸಂಗೀತಗಾರರ ಬಗ್ಗೆ ಖಚಿತವಾದ ಮಾಹಿತಿ ನೀಡಬಲ್ಲ ವಿಶ್ವಕೋಶ. ಮೈಸೂರಿನ ಆಸ್ಥಾನ ವಿದ್ವಾಂಸರಾದ ವೆಂಕಟೇಶ ದೇವರಲ್ಲಿ ಮೃದಂಗ ಶಿಕ್ಷಣ ಪಡೆದ ಇವರು ನಾಡಿನ ಅನೇಕ ಹಿರಿಯ ಕಲಾವಿದರಿಗೆ ಪಕ್ಕವಾದ್ಯ ಒದಗಿಸಿ ದ್ದಾರೆ. ಆಕಾಶವಾಣಿಯಲ್ಲಿ ಆಹ್ವಾನಿತ ಕಲಾವಿದರೂ ಅಹುದು. ಯಕ್ಷಗಾನ ದಲ್ಲೂ ಕೈಯಾಡಿಸಿದ್ದಾರೆ. ಅವರು ಕೀರಿಕ್ಕಾಡು ಶತಮಾನೋತ್ಸವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಎ. ನರಸಿಂಹ ಭಟ್
ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ನರಸಿಂಹ ಭಟ್ಟರು ಇನ್ನೂ ಅನೇಕ ಕೃತಿಗಳನ್ನು ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರಿಸಿ, ಈ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನಿತ್ತಿದ್ದಾರೆ. ಶಿಕ್ಷಕನಾಗಿ, ವಿದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಈ ಸಜ್ಜನ ಸಾಹಿತ್ಯ ಸಾಧಕನಿಗೆ ಕೀರಿಕ್ಕಾಡು ಶತಮಾನೋ ತ್ಸವ ಪುರಸ್ಕಾರ ಸಲ್ಲುತ್ತಿದೆ.
ಅಡ್ಕ ಗೋಪಾಲಕೃಷ್ಣ ಭಟ್
ಯಕ್ಷಗಾನ ವ್ಯಾಪ್ತಿ, ಭಾಷೆಯ ಪರಿಧಿಯನ್ನು ಮೀರಿ ಹಬ್ಬಿಸಲು ಪ್ರಯತ್ನಿಸಿ ಮಹತ್ವದ ಸಾಧನೆಯನ್ನು ಮಾಡಿದವರು ಅಡ್ಕ ಗೋಪಾಲಕೃಷ್ಣ ಭಟ್ಟರು. ವೃತ್ತಿಯಲ್ಲಿ ಶಿಕ್ಷಕರಾದ ಇವರು ಉತ್ತಮ ದರ್ಜೆಯ ಯಕ್ಷಗಾನ ಕಲಾವಿದರಾಗಿದ್ದು , ಕಾರ್ತಿಕೇಯ ಕಲಾನಿಲಯವನ್ನು ಕಟ್ಟಿ ಕಲೆಯ ಪ್ರಸಾರ ಮಾಡಿದರು. ಮಲೆಯಾಳದಲ್ಲಿ ಇವರು 1972 ರಿಂದಲೇ ಯಕ್ಷಗಾನ ಪ್ರದರ್ಶನ ಗಳನ್ನು ಕೇರಳದುದ್ದಕ್ಕೂ ನಡೆಸಿ ಕೊಟ್ಟಿದ್ದಾರೆ. ಇವರಿಗೂ ಕೀರಿಕ್ಕಾಡು ಶತಮಾನೋತ್ಸವ ಪುರಸ್ಕಾರ ಸಲ್ಲುತ್ತಿದೆ.
ಕೃಪೆ : www.udayavani.com
|
|
|